- January 28, 2022
ಬಾಹುಬಲಿಯ ಜೊತೆಗೂಡಿ ಹೊಸ ಸಾಮ್ರಾಜ್ಯ ಕಟ್ಟಲಿದ್ದಾರೆ ಕರಣ್ ಜೋಹಾರ್..


ಹಿಂದೆ ಒಂದು ಕಾಲವಿತ್ತು. ಭಾರತ ದೇಶದಾದ್ಯಂತ ಎಲ್ಲರಲ್ಲೂ ಉತ್ತರ ಸಿಕ್ಕದ ಒಂದೇ ಒಂದು ಪ್ರಶ್ನೆಯಿತ್ತು. ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ? ಅಷ್ಟರಮಟ್ಟಿಗೆ “ಬಾಹುಬಲಿ” ಅನ್ನೋ ಚಿತ್ರ ಎಲ್ಲರ ತಲೆಯೊಳಗೆ ಹೊಕ್ಕಿತ್ತು. ಭಾರತ ಮಾತ್ರವಲ್ಲದೆ ಪ್ರಪಂಚದ ಹಲವೆಡೆ ಬಾಹುಬಲಿಗೆ ಜೈಕಾರ ಕೂಗುತ್ತಿದ್ದರು. ಸಿನೆಮಾದ ನಂತರ ಯಶಸ್ಸಿನ ಉತ್ತುಂಗಕ್ಕೇರಿದ್ದ ನಾಯಕನಟ ಪ್ರಭಾಸ್ ಮತ್ತೆ ಕೆಳಗಿಳಿಯಲೇ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಇದೀಗ ಈ ಯಶಸ್ಸಿಗೆ ಬಾಲಿವುಡ್ ನ ಹೆಸರಾಂತ ನಿರ್ಮಾಪಕರು ಕೈಜೋಡಿಸುತ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ.


ಭಾರತದ ಕೆಲವೇ ಕೆಲವು ಪಾನ್ ಇಂಡಿಯಾ ಸ್ಟಾರ್ ಗಳಲ್ಲಿ ಪ್ರಭಾಸ್ ಅವರದ್ದು ಅಳಿಸಲಾಗದ ಹೆಸರು. ಬಾಹುಬಲಿಯ ನಂತರ ಪ್ರಭಾಸ್ ಜೊತೆ ಸಿನಿಮಾ ಮಾಡ್ಬೇಕು ಅಂತ ಹಿಂದೆ ಬಿದ್ದ ನಿರ್ದೇಶಕ ನಿರ್ಮಾಪಕರಿಗೆ ಲೆಕ್ಕಾನೆ ಇರ್ಲಿಲ್ಲ. ಈ ಸಾಲಿನಲ್ಲಿ ಬಾಲಿವುಡ್ ನ ಹೆಸರಾಂತ ನಿರ್ದೇಶಕ-ನಿರ್ಮಾಪಕ ಕರಣ್ ಜೋಹಾರ್ ಕೂಡ ಒಬ್ಬರಾಗಿದ್ದರು. ಮೂಲಗಳ ಪ್ರಕಾರ ಈ ಹಿಂದೆಯೇ ಇಬರಿಬ್ಬರ ನಡುವೆ ಸಿನಿಮಾ ಮಾತುಕತೆ ಆಗಿತ್ತಂತೆ. ಆದರೆ ಪ್ರಭಾಸ್ ಸಂಭಾವನೆಯನ್ನ ಕೇಳಿ ಕರಣ್ ಬೆಚ್ಚಿಬ್ಬಿದ್ದು ಮಾತುಕತೆ ಅರ್ಧಕ್ಕೆ ನಿಂತಿತ್ತು. ಆದರೆ ಈಗ ಈ ಜೋಡಿ ಒಂದಾಗೋದಕ್ಕೆ ಸಮಯ ಕೂಡಿ ಬಂದಿದೆ.
‘ಡಾರ್ಲಿಂಗ್’ ಪ್ರಭಾಸ್ ಕೈಯಲ್ಲಿ ಈಗಾಗಲೇ ಹಲವಾರು ಚಿತ್ರಗಳಿದಾವೆ. ಟೋಲಿವುಡ್ ನ ಮೂಲಗಳ ಪ್ರಕಾರ ಇನ್ನು ಮೂರು-ನಾಲ್ಕು ವರ್ಷ ಯಾರ ಕೈಗೂ ಸಿಗೋದು ಕಷ್ಟ ಇದೆ. ಇದರ ಮಧ್ಯೆ ಕರಣ್ ಜೋಹಾರ್ ಜೊತೆಗಿನ ಚಿತ್ರವನ್ನ ಯಾವಾಗ ಮಾಡ್ತಾರೆ ಅಂತ ಪ್ರೇಕ್ಷಕರೆಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇದರ ಜೊತೆ ಇಂತಹ ದೊಡ್ಡ ಚಿತ್ರಕ್ಕೆ ನಿರ್ದೇಶಕರು ಯಾರು ಅನ್ನೋ ಕುತೂಹಲ ಕೂಡ ಜನರ ಮನಸಲ್ಲಿದೆ. ಕೆಲವರ ಪ್ರಕಾರ ಕರಣ್ ನಿರ್ಮಾಣದ ಜೊತೆಗೇ ನಿರ್ದೇಶನ ಕೂಡ ಮಾಡ್ತಾರಂತೆ. ಮೂಲಗಳ ಪ್ರಕಾರ ‘ಮಹಾನಟಿ’ಯನ್ನ ತೆರೆಮೇಲೆ ತಂದಿದ್ದ ನಾಗ್ ಅಶ್ವಿನ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ತಗೋಬಹುದು ಅನ್ನಲಾಗಿದೆ. ಈಗಾಗಲೇ ನಾಗ್ ಅಶ್ವಿನ್ ಪ್ರಭಾಸ್-ದೀಪಿಕಾ ನಟನೆಯ ಸಿನಿಮಾವೊಂದಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಕರಣ್-ಪ್ರಭಾಸ್ ಒಂದಾಗೋದಾದರೆ ಸಿನಿಮಾ ಬಹುನಿರೀಕ್ಷಿತ ಆಗೋದರಲ್ಲಿ ಸಂಶಯ ಇಲ್ಲ. ಇಬ್ಬರೂ ಅವರವರ ಸಿನಿವರ್ಗದಲ್ಲಿ ಹೆಸರಾಂತರು. ಸದ್ಯಕ್ಕೆ ಈ ಸಿನಿಮಾ ಸುದ್ದಿ ಗಾಳಿಸುದ್ದಿಯಾಗೆ ಇದೆ. ಇವರಿಬ್ಬರು ಅಧಿಕೃತವಾಗಿ ಘೋಷಣೆ ಮಾಡೋದನ್ನೇ ಪ್ರಭಾಸ್ ಅಭಿಮಾನಿಗಳು ಎದುರುಗಾಣುತ್ತಿದ್ದಾರೆ.


