• May 5, 2022

ಅಶರೀರ ಶಕ್ತಿಯ ಅನುಭವವಾಗಿತ್ತಂತೆ ‘ಅವತಾರ ಪುರುಷ’ನಿಗೆ

ಅಶರೀರ ಶಕ್ತಿಯ ಅನುಭವವಾಗಿತ್ತಂತೆ ‘ಅವತಾರ ಪುರುಷ’ನಿಗೆ

‘ಸಿಂಪಲ್ ಆಗೊಂದ್ ಲವ್ ಸ್ಟೋರಿ’ ಎಂಬ ಒಂದೇ ಒಂದು ಚಿತ್ರದಿಂದ ಸಿಂಪಲ್ ಸುನಿ ಎಂದೇ ಖ್ಯಾತರಾಗಿರುವ ಕನ್ನಡದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿರುವವರು ನಿರ್ದೇಶಕ ಸುನಿ. ತಮ್ಮದೇ ವಿಶಿಷ್ಟ ಶೈಲಿಯಿಂದ ಜನಮನಗೆಲ್ಲುವ ಇವರ ಮುಂದಿನ ಚಿತ್ರ ‘ಅವತಾರ ಪುರುಷ’ ಬಿಡುಗಡೆಗೆ ಸಿದ್ಧವಾಗಿದೆ. ಮೇ 6ರಂದು ಚಿತ್ರಮಂದಿರಗಳಲ್ಲಿ ಹೆಜ್ಜೆ ಇಡಲಿರೋ ಈ ಸಿನಿಮಾದ ಪ್ರಚಾರದ ಚಟುವಟಿಕೆಗಳು ಬರದಿಂದ ಸಾಗುತ್ತಿವೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಿರ್ದೇಶಕ ಸುನಿ ಚಿತ್ರತಂಡ ಕಂಡ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

ಶರಣ್ ಹಾಗು ಆಶಿಕಾ ರಂಗನಾಥ್ ಅವರು ಎರಡನೇ ಬಾರಿ ‘ಅವತಾರ ಪುರುಷ’ ಚಿತ್ರದಿಂದ ಜೋಡಿಯಾಗಿ ತೆರೆಮೇಲೆ ಬರಲಿದ್ದಾರೆ. ಇವರ ಜೊತೆ ಮುಖ್ಯಪಾತ್ರಗಳಲ್ಲಿ ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಬಾಲಾಜಿ ಮನೋಹರ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಮಾಟಮಂತ್ರ, ವಾಮಾಚಾರಗಳ ಬಗ್ಗೆ ಮಾಡಲಾಗಿದ್ದು, ಚಿತ್ರೀಕರಣ ಸಂಧರ್ಭದಲ್ಲಿ ಅದೇ ರೀತಿಯ ಅನುಭವ ಚಿತ್ರತಂಡಕ್ಕಾಗಿದೆಯಂತೆ. ಈ ಬಗ್ಗೆ ಮಾತನಾಡಿದ ಸುನಿ, “‘ಅವತಾರ ಪುರುಷ’ ಸಿನಿಮಾದ ಚಿತ್ರೀಕರಣಕ್ಕೆ ಬೇರೆಬೇರೆ ಸ್ಥಳಗಳಿಗೆ ಹೋಗಿದ್ದೇವೆ. ಚಿತ್ರವನ್ನು ಮಾಟಮಂತ್ರಗಳ ಬಗ್ಗೆ ಮಾಡಲಾಗಿದ್ದು, ಕೇರಳ ರಾಜ್ಯದ ಜಾಗವೊಂದರಲ್ಲಿನ ಚಿತ್ರೀಕರಣದ ಸಂಧರ್ಭದಲ್ಲಿ ನೆಗೆಟಿವ್ ಎನರ್ಜಿಯನ್ನ ಎಕ್ಸ್ಪೀರಿಯೆನ್ಸ್ ಮಾಡಿದ್ದೆವು.. ಒಂದು ಅಶರೀರ ಶಕ್ತಿಯ ಅಸ್ತಿತ್ವದ ಅನುಭವ ನಮಗಾಗಿತ್ತು” ಎಂದಿದ್ದಾರೆ ಸುನಿ.

ಇದರ ಜೊತೆಗೆ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ ಸುನಿ, “ಕಳೆದ ವರ್ಷ ನಮ್ಮ ಚಿತ್ರದ ಶೂಟಿಂಗ್ ಗೆ ರಾಜಸ್ಥಾನಕ್ಕೆ ಹೋಗಿದ್ದಾಗ ಅಲ್ಲಿನ ಜನ, ನಮ್ಮನ್ನು ಕನ್ನಡಿಗರು ಎಂದಾಗ ‘ಕೆಜಿಎಫ್’ ಚಿತ್ರದ ಮೂಲಕ ಗುರುತಿಸುತ್ತಿದ್ದರು. ಇದೀಗ ಕೆಜಿಎಫ್ ಚಾಪ್ಟರ್ 2 ಯಶಸ್ಸು ಕಂಡಿರುವುದು ಜನರನ್ನ ಥೀಯೇಟರ್ ಗಳ ಕಡೆಗೆ ಕರೆದುತರಲು ಕಾರಣವಾಗಿದೆ. ಒಳ್ಳೆಯ ಕಂಟೆಂಟ್ ಗಳು ಬಂದರೆ ಜನ ಖಂಡಿತವಾಗಿ ಚಿತ್ರಮಂದಿರಗಳಿಗೆ ಬರುತ್ತಾರೆ ಎಂಬುದು ಖಾತ್ರಿಯಾಗಿದೆ” ಎನ್ನುತ್ತಾರೆ. ನೀವು ಪಾನ್ ಇಂಡಿಯನ್ ಚಿತ್ರಗಳನ್ನ ಮಾಡುತ್ತೀರಾ? ಎಂದು ಕೇಳಿದ ಪ್ರಶ್ನೆಯೊಂದಕ್ಕೆ, “ಒಳ್ಳೆಯ ಕಥೆ, ಒಳ್ಳೆಯ ಸ್ಟಾರ್ ಸಿಕ್ಕರೆ ಖಂಡಿತ ಮಾಡುತ್ತೇನೆ” ಎಂದಿದ್ದಾರೆ.

ಮೇ 6ಕ್ಕೆ ‘ಅವತಾರ ಪುರುಷ’ ರಿಲೀಸ್ ಆಗುತ್ತಿದ್ದು, ಈ ಹಾಸ್ಯಬರಿತ ಸಸ್ಪೆನ್ಸ್ ಚಿತ್ರಕ್ಕೆ ನಿರೀಕ್ಷೆಗಳು ಹೆಚ್ಚಾಗಿವೆ. ಚಿತ್ರದ ಟ್ರೈಲರ್ ಹಾಗು ಹಾಡುಗಳು ಜನರಿಂದ ಅದ್ಭುತ ಪ್ರತಿಕ್ರಿಯೆಗಳನ್ನು ಕೂಡ ಪಡೆಯುತ್ತಿವೆ. ‘ಅವತಾರ ಪುರುಷ’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈಗ ಬರುತ್ತಿರುವ ಮೊದಲನೇ ಭಾಗಕ್ಕಿಂತ ಎರಡನೇ ಭಾಗ ಇನ್ನಷ್ಟು ರೋಮಾಂಚನಕಾರಿಯಾಗಿರಲಿದೆ ಎನ್ನುತ್ತಾರೆ ಸುನಿ.