• July 10, 2022

777 ಚಾರ್ಲಿ ಕಿರಣ್ ರಾಜ್ ರ ನನಸಾಗದ ಆ ಒಂದು ಕನಸು

777 ಚಾರ್ಲಿ ಕಿರಣ್ ರಾಜ್ ರ ನನಸಾಗದ ಆ ಒಂದು ಕನಸು

ಸದ್ಯ ಕನ್ನಡಿಗರಿಂದ ಹಿಡಿದು ಭಾರತದಾದ್ಯಂತ ಮನೆಮಾತಾಗಿರುವವರು ಕಿರಣ್ ರಾಜ್. ‘777 ಚಾರ್ಲಿ’ ಸಿನಿಮಾದ ಮೂಲಕ ತಮ್ಮ ಮೊದಲ ನಿರ್ದೇಶನದಲ್ಲೇ ಜನಮಾನಸದ ಮನಗಳಲ್ಲಿ ಜಾಗ ಮಾಡಿಕೊಂಡಿದ್ದಾರೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ನಂತರ ಸತತ ಮೂರು ವರ್ಷಗಳ ಕಾಲ ಒಂದೇ ಸಿನಿಮಾದ ಮೇಲೆ ಗಮನ ಹರಿಸಿ, ‘777 ಚಾರ್ಲಿ’ಯಂತಹ ಮನತುಂಬೋ ಸಿನಿಮಾವನ್ನ ಚಿತ್ರರಂಗಕ್ಕೆ ನೀಡಿದವರು ಕಿರಣ್ ರಾಜ್. ‘777 ಚಾರ್ಲಿ’ಯ ಯಶಸ್ಸಿನ ಸಂತಸದಲ್ಲಿರುವ ಇವರು, ತಮ್ಮ ಕನಸೊಂದರ ಬಗೆಗೆ ಹೇಳಿಕೊಂಡಿದ್ದಾರೆ.

ಧರ್ಮ ಹಾಗು ಚಾರ್ಲಿಯ ಕಥೆಯನ್ನು ಮನಮುಟ್ಟುವ ಹಾಗೇ ಹೇಳಿರುವ ಕಿರಣ್ ರಾಜ್ ಅವರಿಗೆ ‘ಕರ್ನಾಟಕ ರತ್ನ’ ಪುನೀತ್ ರಾಜಕುಮಾರ್ ಅವರಿಗೆ ಸಿನಿಮಾ ನಿರ್ದೇಶನ ಮಾಡುವ ಕನಸಿತ್ತಂತೆ. ಇದಕ್ಕಾಗಿಯೇ ಕಥೆಯೊಂದನ್ನು ಕೂಡ ಸಿದ್ಧ ಮಾಡಿಕೊಂಡಿದ್ದರು. ‘777 ಚಾರ್ಲಿ’ ಚಿತ್ರದ ಕೆಲಸಗಳ ನಡುವೆಯೇ ಸ್ಪೋರ್ಟ್ಸ್ ಬಗೆಗಿನ ಕಥೆಯೊಂದನ್ನು ಇವರು ಮಾಡಿಕೊಂಡಿದ್ದು, ಇದಕ್ಕೆ ಅಪ್ಪುವೇ ನಾಯಕರಾಗಬೇಕೆಂಬ ಯೋಜನೆ ಹಾಕಿಕೊಂಡಿದ್ದರಂತೆ. ‘777 ಚಾರ್ಲಿ’ ಸಿನಿಮಾ ತೆರೆಕಂಡ ಮೇಲೆ ಅಪ್ಪು ಅವರನ್ನು ಈ ಬಗ್ಗೆ ಕೇಳುವುದು ಎಂದು ಅಂದುಕೊಂಡಿದ್ದರು. ಆದರೆ ಇದು ಸಾಧ್ಯವಾಗಲೇ ಇಲ್ಲ. ಈ ಎಲ್ಲ ಬೆಳವಣಿಗೆಯ ಮುನ್ನವೇ ಅಪ್ಪು ನಮ್ಮನ್ನೆಲ್ಲ ಅಗಲಿದ್ದರು. ಹಾಗಾಗಿ ಈ ಕನಸು ಕನಸಾಗೆ ಉಳಿಯಿತು ಎನ್ನುತ್ತಾರೆ ಕಿರಣ್ ರಾಜ್.

ತಮ್ಮ ಮೊದಲ ಸಿನಿಮಾ ‘777 ಚಾರ್ಲಿ’ಯ ಭರವಸೆ ಮೂಡಿಸಿರೋ ಕಿರಣ್ ರಾಜ್, ಕನ್ನಡ ಚಿತ್ರರಂಗದಲ್ಲಿ ಮನಸ್ಸಿಗೆ ಹತ್ತಿರವಾಗುವಂತ ಸಿನಿಮಾಗಳನ್ನು ಅದ್ಭುತವಾಗಿ ಮಾಡಬಲ್ಲ ನಿರ್ದೇಶಕರು ಎನಿಸಿಕೊಂಡಿದ್ದಾರೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ನುಗ್ಗುತ್ತಿರುವ ‘777 ಚಾರ್ಲಿ’ಯ ನಂತರ ಇವರ ಸಿನಿಮಾಗಳ bagge ಕಾದುನೋಡಬೇಕಿದೆ.